ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿ ಕಶ್ಯಪ್ ಅವರು ನಿರ್ಮಿಸುತ್ತಿರುವ ‘ಬದ್ಮಾಶ್‘ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಬಾಕಿಯಿರುವ ಹಾಡುಗಳ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.
ಜೂಡಾ ಸ್ಯಾಂಡಿ ಅವರ ಸಂಗೀತವಿರುವ ಚಿತ್ರದ ಒಂದು ಹಾಡನ್ನು ವಿಜಯಪ್ರಕಾಶ್ ಹಾಡಿದ್ದಾರೆ. ಯೋಗರಾಜ್ಭಟ್ ಗೀತರಚನೆ ಮಾಡಿದ್ದಾರೆ. ಈ ಹಾಡಿನ ಚಿತ್ರೀಕರಣ ಪೂರ್ಣವಾಗಿದೆ. ಈಗ ಚಿತ್ರತಂಡ ಇಂಟ್ರೋಡಕ್ಷನ್ ಸಾಂಗ್ ರೆಕಾರ್ಡಿಂಗನ್ನೂ ಮುಗಿಸಿದೆ. ಈ ಹಾಡನ್ನು ‘ಧಂ ಪವರೇ‘ ಹಾಡಿನ ಖ್ಯಾತಿಯ ಚಂದನ್ ಶೆಟ್ಟಿ ಹಾಡಿದ್ದಾರೆ. ‘ಬಹದ್ದೂರ್‘ ನಿರ್ದೇಶಕ ಚೇತನ್ಕುಮಾರ್ ಈ ಹಾಡನ್ನು ಬರೆದಿದ್ದಾರೆ. ಈ ಹಾಡಿಗೆ ‘ಜೋಷ್‘ ಸಿನಿಮಾ ಖ್ಯಾತಿಯ ಅರ್ಬನ್ ಲ್ಯಾಡ್ಸ್ ಅಲೋಕ್ ಅವರ ಕನ್ನಡದ ರಾಪ್ ಕೂಡ ಬಳಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರಕ್ಕೆ ಜೂಡ ಸ್ಯಾಂಡಿ ಸಂಗೀತ ನೀಡಿದ್ದಾರೆ. ಶ್ರೀಷ ಕುಡುವಳ್ಳಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಬಾಬುಖಾನ್ ಕಲಾ ನಿರ್ದೇಶನ, ವಿನೊದ್, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಶಂಕರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ‘ಬದ್ಮಾಶ್‘ಗೆ ಆಕಾಶ್ ಶ್ರೀವತ್ಸ ಕಥೆ, ಪ್ರಶಾಂತ್, ಸಂತೋಷ್ ಗೋಪಾಲ್ ಹಾಗೂ ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದಿದ್ದಾರೆ. ಆಕಾಶ್ ಶ್ರೀವತ್ಸ, ವಿನೋದ್ ಕುಮಾರ್ ಹಾಗೂ ಪ್ರತೀಕ್ ಸಂಭಾಷಣೆ ಬರೆದಿದ್ದಾರೆ.
ಧನಂಜಯ್ ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ಸಂಚಿತಾ ಶೆಟ್ಟಿ. ಅಚ್ಯುತಕುಮಾರ್, ಜಹಂಗೀರ್, ರಮೇಶ್ ಭಟ್, ರಮೇಶ್ ಪಂಡಿತ್, ಬಿ.ಸುರೇಶ್, ಪ್ರಕಾಶ್ ಬೆಳವಾಡಿ, ಶ್ರೀನಿವಾಸ ಪ್ರಭು, ಬಿರಾದಾರ್, ಸುಚೇಂದ್ರ ಪ್ರಸಾದ್, ಪನ್ನಗಾಭರಣ, ಲಕ್ಷ್ಮೀ ಆನಂದ್, ಬೆಂಗಳೂರು ನಾಗೇಶ್, ಎಂ.ಎಸ್.ಉಮೇಶ್, ಗೌರೀಶ್ ಅಕ್ಕಿ, ಅವಿನಾಶ್ ಶೆಟ್ಟಿ, ಕರಡಿ ಸೋಮ, ಸೂರ್ಯ ವಸಿಷ್ಠ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.